ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಪ್ರಸ್ತಾವನೆ

ಬ್ರಿಟಿಷರ ಆಡಳಿತವಿದ್ದಾಗಲೇ 20ನೇ ಶತಮಾನದ ಆರಂಭದಲ್ಲಿ ಕರ್ನಾಟಕ ರಾಜ್ಯವು ವಿದ್ಯುತ್ತನ್ನು ಉತ್ಪಾದಿಸಿ, ಪ್ರಸರಣಗೊಳಿಸಿ ಮತ್ತು ಗ್ರಾಹಕರಿಗೆ ಸರಬರಾಜು ಮಾಡಿದ ಪ್ರಪ್ರಥಮ ರಾಜ್ಯವಾಗಿರುವುದು ಸರ್ವವಿದಿತ ವಿಷಯವಾಗಿದೆ. ನಾವು ಸಾಕಷ್ಟು ನದಿ ನೀರಿನ ಸಂಪನ್ಮೂಲ ಹೊಂದಿದ್ದು, ಜಲವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವು ಮೊದಲಿಗನಾಗಿದೆ. ಸ್ವಾತಂತ್ರ್ಯ ಬಂದ ಬಳಿಕ ಕೂಡಲೇ ಸರ್ಕಾರಿ ವಿದ್ಯುತ್ ಇಲಾಖೆ ಅಸ್ತಿತ್ವಕ್ಕೆ ಬಂತು. ತದನಂತರ ಇದನ್ನು ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯನ್ನಾಗಿ ಪರಿವರ್ತಿಸಿ ವಿದ್ಯುತ್ ಪ್ರಸರಣ ಮತ್ತು ವಿತರಣೆ ಕೆಲಸಗಳನ್ನು ನಿರ್ವಹಿಸಲಾಗುತ್ತಿತ್ತು. ಜಲವಿದ್ಯುತ್ ನಿರ್ಮಾಣ ಯೋಜನೆಗಳನ್ನು ನೋಡಿಕೊಳ್ಳಲು ಎಚ್.ಇ.ಸಿ.ಪಿ. ಗೆ ವಹಿಸಲಾಗಿತ್ತು. 1970-80ರ ಮಧ್ಯೆ ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂದು ಪುನರ್ ನಾಮಕರಣ ಮಾಡಲಾಯಿತು ಮತ್ತು ಜಲ ವಿದ್ಯುತ್ ನಿಗಮ ಯೋಜನೆಯನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತವಾಗಿ ಪರಿವರ್ತಿಸಲಾಯಿತು.

 

1999ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣ ಕಾಯಿದೆಯನ್ನು ತಂದು ಕರ್ನಾಟಕ ವಿದ್ಯುತ್ ಮಂಡಳಿಯನ್ನು ವಿಭಜಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿಶ್ವೇಶ್ವರಯ್ಯ ನಿಗಮ ನಿಯಮಿತವೆಂದು ಪುನರ್ ರಚಿಸಿತು.

 

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವನ್ನು ರಚಿಸಿ, ವಿದ್ಯುತ್ ರಂಗದ ಅಭಿವೃದ್ಧಿ, ಅದರೊಳಗಿರುವ ಸ್ಪರ್ಧೆಗೆ ಉತ್ತೇಜನ ನೀಡುವುದು, ಗ್ರಾಹಕರ ಆಸಕ್ತಿಯನ್ನು ರಕ್ಷಿಸುವುದು ಮತ್ತು ವಿದ್ಯುತ್ ದರ ಪರಿಷ್ಕರಣೆ, ಸಬ್ಸಿಡಿಗಳ ಕುರಿತಾಗಿ ಪಾರದರ್ಶಕತೆ, ದಕ್ಷ ಮತ್ತು ಉದಾರ ಪರಿಸರವಾದಿ ನೀತಿಗಳಿಗೆ ಉತ್ತೇಜನ ನೀಡುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸಲು ತಿಳಿಸಲಾಯಿತು.

 

ವಿದ್ಯುತ್ ರಂಗದಲ್ಲಿ ಮೇಲೆ ತಿಳಿಸಿದ ಸುಧಾರಣೆಯನ್ನು ಜಾರಿಗೆ ತಂದ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯ ವಿದ್ಯುತ್ ಮಂಡಳಿಯ ಚೆನ್ನಾಗಿಲ್ಲದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಕೊರತೆಯನ್ನು ನೀಗಿಸಿ ನಂಬಲರ್ಹ ಮತ್ತು ಗುಣಮಟ್ಟದ ವಿದ್ಯುತ್ತನ್ನು ಗ್ರಾಹಕರಿಗೆ ನೀಡುವಲ್ಲಿ ಸುಧಾರಣೆ ತರಲು ಮೇಲೆ ತಿಳಿಸಿದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

 

 

2002ರ ಮಧ್ಯಭಾಗದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವನ್ನು ಮತ್ತೆ ವಿಭಜಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು 4 ವಿದ್ಯುತ್ ಸರಬರಾಜು ಕಂಪನಿಗಳನ್ನು ರಚಿಸಲಾಯಿತು. ಇದರಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ವಿದ್ಯುತ್ ಪ್ರಸರಣ ಮತ್ತು 4 ವಿದ್ಯುತ್ ಕಂಪನಿಗಳಾದ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಬೆಸ್ಕಾಂ), ಹುಬ್ಬಳ್ಳಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಹೆಸ್ಕಾಂ), ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಮೆಸ್ಕಾಂ) ಮತ್ತು ಗುಲ್ಬರ್ಗ ವಿದ್ಯುಚ್ಚಕ್ತಿ ಸರಬರಾಜು ಕಂಪನಿ (ಜೆಸ್ಕಾಂ)ಗಳು ವಿದ್ಯುಚ್ಛಕ್ತಿ ಸರಬರಾಜಿನ ಕೆಲಸ ನೋಡಿಕೊಳ್ಳಲು ತಿಳಿಸಲಾಯಿತು. ಇವುಗಳು ಸ್ವತಂತ್ರ ಸರಬರಾಜು ಕಂಪನಿಗಳಾಗಿವೆ ಮತ್ತು ಇವುಗಳು ದಿನಾಂಕ 01.06.2002 ರಿಂದ ತಮ್ಮ ವ್ಯವಹಾರವನ್ನು ಪ್ರಾರಂಭಿಸಿವೆ. ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ ಹೀಗೆ 7 ಜಿಲ್ಲೆಗಳ ವ್ಯಾಪ್ತಿ ಹೊಂದಿ ಹೆಸ್ಕಾಂ ಕಂಪನಿಯು ಆಸ್ತಿತ್ವಕ್ಕೆ ಬಂದಿತ್ತು. ಹೆಸ್ಕಾಂ ಕಂಪನಿಯು ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಗಳಲ್ಲಿ ಕಾರ್ಯ ಮತ್ತು ಪಾಲನಾ ವಲಯನ್ನು ಮುಖ್ಯ ಎಂಜಿನಿಯರ್ (ವಿ) ರವರ ನೇತೃತ್ವದಲ್ಲಿರುತ್ತದೆ. ಹುಬ್ಬಳ್ಳಿ, ಹಾವೇರಿ, ಸಿರಸಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿಗಳನ್ನು ಅಧೀಕ್ಷಕ ಎಂಜಿನಿಯರ್ (ವಿ) ರವರ ನೇತೃತ್ವದಲ್ಲಿರುತ್ತದೆ. ಹೆಸ್ಕಾಂ ಕಂಪನಿಯು 26 ಕಾರ್ಯ ಮತ್ತು ಪಾಲನಾ ವಿಭಾಗಗಳು, 83  ಕಾರ್ಯ ಮತ್ತು ಪಾಲನಾ ಉಪವಿಭಾಗಗಳು ಮತ್ತು  334  ಕಾರ್ಯ ಮತ್ತು ಪಾಲನಾ ಶಾಖಾ ಕಛೇರಿಯನ್ನು ಹೊಂದಿರುತ್ತದೆ.

 

ಹೆಸ್ಕಾಂ ಕಂಪನಿಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರೂ ಸೇರಿ ಹೆಸ್ಕಾಂನ ಒಟ್ಟು ಸಿಬ್ಬಂದಿಗಳ ಸಂಖ್ಯೆಯು 9812 ಇದ್ದು, ಮಂಜೂರಾದ ಹುದ್ದೆಗಳ ಸಂಖ್ಯೆಯು 17019  ಆಗಿದೆ.

 

ಸುಧಾರಣೆಯ ಮತ್ತು ಕಾರ್ಯಕ್ರಮಗಳ ಪುನರಚನೆಯ ನಿಟ್ಟಿನಲ್ಲಿ ಪ್ರತ್ಯೇಕ ಸ್ವತಂತ್ರ ಸಂಸ್ಥೆಗಳಾಗಿ, ವಿಶೇಷ ಜವಾಬ್ದಾರಿಗಳೊಂದಿಗೆ ಎಸ್ಕಾಂಗಳನ್ನು ರಚಿಸಲಾಗಿದೆ. ರಾಜ್ಯದ ಆರ್ಥಿಕತೆಗೆ ಇದರಿಂದ ವಿದ್ಯುತ್ ಕ್ಷೇತ್ರವು ನಿವ್ವಳ ಕೊಡುಗೆ ನೀಡಿದಂತಾಗುತ್ತದೆ. ಮೇಲೆ ತಿಳಿಸಿದ ಎಲ್ಲಾ ಕಂಪನಿಗಳು/ಸಂಸ್ಥೆಗಳು ಪೂರ್ತಿಯಾಗಿ ಸ್ವತಂತ್ರ ಸರ್ಕಾರಿ ಕಂಪನಿಗಳಾಗಿದ್ದು ಸಂಸ್ಥೆಯ ವಿವರಣಾ ಪತ್ರದಡಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ರಾಜ್ಯ ಸರ್ಕಾರ ಮತ್ತು ನಿಯಂತ್ರಣ ಪ್ರಾಧಿಕಾರವಾದ ಕ.ವಿ.ನಿ. ಆಯೋಗ ನೀಡುವ ಪರವಾನಗಿ ಮತ್ತು ಆದೇಶಗಳನ್ವಯ ಕಾರ್ಯ ನಿರ್ವಹಿಸುತ್ತಿವೆ.